ಭಾನುವಾರ, ಮಾರ್ಚ್ 15, 2020

ಬಂತು ಯುಗಾದಿ





ಬಂತು ಯುಗಾದಿ

ಯುಗಾದಿ ಬಂತು ಹರುಷ ತಂತು
ಹೊಸ ಬದುಕಿನ ಹೊಸಗಾನಕೆ
ನಿಸರ್ಗ ಚೆಲುವ ಹೊಮ್ಮಿ ಬಂತು
ಹೊಸ ವರುಷದ ಹೊಸ ಸೃಷ್ಟಿಗೆ ||

ಸೃಷ್ಟಿ ಸೊಬಗು ಮನ ಸೆಳೆದಿದೆ
ಚಿಗುರು ಮೂಡಿ ಹಸಿರು ಚಿಮ್ಮಿದೆ
ಮಾವು ಬೇವು ಹೂವು ಕಾಯಿ
ಯುಗಾದಿ ಮಂತ್ರ ಜಪಿಸುತಿವೆ ||

ಮಾವು ಬೇವು ಒಂದುಗೂಡಿ
ಹೊಸ ಬದುಕಿಗೆ ಮೋಡಿ ಮಾಡಿವೆ
ಸುಖ ದುಃಖ ದ ಸಮ ಪ್ರಸಾದ
ಪ್ರತಿಜೀವಿಗೂ ಯುಗಾದಿ ನೀಡಿದೆ ||

ಮೊದಲ ಮಳೆಗೆ ಚಿಮ್ಮಿ ಬಂತು
ಎಲ್ಲೆಡೆಯೂ ಹಸಿರು ತೋರಣ
ಚೈತ್ರಗಾನ ಹಾಡಿ ನಲಿಯಲಿಂದು
ಕೋಗಿಲೆಗೆ ದ್ವನಿಯು ಮೂಡಿದೆ ||

ಬಾ ಯುಗಾದಿ ಬವಣೆ ನೀಗು
ಬರಡು ನೆಲದಿ ಹಸಿರ ನೀಡು
ಮೇಲು ಕೀಳು ಎಲ್ಲ ಕಳೆದು
ಸುಖ ದುಃಖ ಸಮರ ಸಾರು ||

ಸ್ವಾರ್ಥಿ ಮನುಜ ಇಳೆಯ ತನುಜ
ಅರಿಯಲಿಂದು ಪೃಥ್ವಿ ಮಹಿಮೆ
ಆಯುರಾರೋಗ್ಯ ಎಲ್ಲ ಪಡೆದು
ಅರಿವು ಜಗದಿ ಯುಗಾದಿ ತರಲಿ ||

=> ವೆಂಕಟೇಶ ಚಾಗಿ
ಲಿಂಗಸುಗೂರ

ಶನಿವಾರ, ಫೆಬ್ರವರಿ 22, 2020

23-02-2020 ರಂದು ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳು  :-





ಕವಿತೆ | ಮೌನಯುದ್ದ | ವೆಂಕಟೇಶ ಚಾಗಿ

                           


ಮೌನಯುದ್ದ


ಕನಸುಗಳ ಹಸಿ ಹಸಿವಿಗೆ
ಛಲವೇ ಕೂಡಿಟ್ಟ ಆಹಾರ
ಗುರಿಯೊಂದು ಕಣ್ಣ ಸೆಳೆಯುತ್ತಿದೆ
ಅದೇ ಈಗ ಮನಸಿನ ಆಹಾಕಾರ||

ಸೋಲುಗಳು ಹೊಂಚು ಹಾಕಿವೆ
ಛಲವ ಕದ್ದು ಇಂಚಿಂಚು ಭಕ್ಷಿಸಲು
ಮನದೊಳಗೆ ಕಂಪನ ಆತಂಕ
ನಂಬಿಕೆಯ ಸೌಧ ಕೆಡವಲು ||

ಬತ್ತಲಾದ ಬಯಲಿಗೇನು ಗೊತ್ತು
ಕೆಂಪು ರಕ್ತದ ಗತ್ತು ಮತ್ತು
ಯಾರೋ ನೆಟ್ಟ ಮುಳ್ಳು ಕಲ್ಲುಗಳು
ಹೃದಯಕೆ ಎಲ್ಲವೂ ಗೊತ್ತು ||

ಸ್ವಾರ್ಥಗಳು ಮೂಢ ಕಪ್ಪು ಮನಗಳು
ಕತ್ತಲಾಗಿಸಿವೆ ಎತ್ತಲೂ ಸುತ್ತಲೂ
ಕತ್ತಲನ್ನೇ ನುಂಗುವಂತಹ ದಾಹ ಮೋಹ
ದೃಷ್ಟಿ ಮಾತ್ರ ಆ ಗುರಿಯ ಮುತ್ತಲು ||

ಅಗೋ ಅದೊಂದು ಗುರಿ ಹತ್ತಿರ
ಬಾಚಿಕೊಳ್ಳುವಷ್ಟು ಇನ್ನೂ ಹತ್ತಿರ
ಆನಂದಬಾಷ್ಪದ ತಾಕತ್ತು ಕಿಮ್ಮತ್ತು
ನೆತ್ತರ ನೋವಿಗಿಂತ ಎತ್ತರ ಬಲು ಎತ್ತರ..||

=> ವೆಂಕಟೇಶ ಚಾಗಿ

ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ

    ***ಪುಟ್ಟನ ಗಾಡಿ*** ( ಮಕ್ಕಳ   ಕವನ ) ಪುಟ್ಟನ ಗಾಡಿ ಹೊರಟಿದೆ ನೋಡಿ ಬುರ್ ಬುರ್ ಗಾಡಿ ಮಾಡಿದೆ ಮೋಡಿ || ಚಾಲಕ ಇವನೆ ಪಯಣಿಗ ಒಬ್ಬನೆ ನಿಲ್ದಾಣ ನಮ್ಮನೆ ಹೊರಟಿತು ಮ...